
ಗಜೇಂದ್ರ ಮೋಕ್ಷದ ಕಥೆ
ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ
ವಾಣಿ ಭಾರತಿಯ ಗಜಮುಖನ ಬಲಗೊಂಬೆ
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ
ಶ್ರೀನಾಥ ಗಜರಾಜಗೊಲಿದ ಸಂಗತಿಯ
ನಾರಾಯಣ ಕೃಷ್ಣಾ…
ಛಪನ್ನ ದೇಶ ದೇಶದ ರಾಯರೊಳಗೆ
ಉತ್ತಮದ ದೇಶ ಗೌಳಾದೇಶದಲ್ಲಿ
ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು
ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು
ನಾರಾಯಣ ಕೃಷ್ಣಾ…
ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ
ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ
ನಾರಾಯಣ ಕೃಷ್ಣಾ…
ಸರ್ಪಶಯನನ ಧ್ಯಾನದಲ್ಲಿದ್ದ ತಾನು
ಮತ್ತೆ ತ್ರಿಕೊಟಪರ್ವತಕಾಗಿ ಬಂದು
ನಾಗಶಯನನ ಧ್ಯಾನದಲ್ಲಿದ್ದ ತಾನು
ಮೇರುಮಂದರದ ಸಮೀಪಕ್ಕೆ ಬಂದು
ನಾರಾಯಣ ಕೃಷ್ಣಾ…
ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ
ಎದ್ದೆದ್ದು ಕುಣಿವ ಮೃಗಖಗಗಳ ಸೀಮ
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ
ಸುತ್ತ ಸುವರ್ಣಮಯ ವಸ್ತುಗಳ ಧಾಮ
ನಾರಾಯಣ ಕೃಷ್ಣಾ…
ಹಲವು ನದಿ ಹಲವು ಕೊಳ
ಹಲವು ಸರೋವರದಿ
ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ
ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ
ನಾರಾಯಣ ಕೃಷ್ಣಾ…
ಬಂದು ನದಿಯಲ್ಲಿ ಸ್ನಾನವನು ಮಾಡಿದನು
ಚಂದ ದಿಕ್ಕಿದನು ದ್ವಾದಶ ನಾಮಗಳನು
ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ
ಇಂದಿರಾಪತಿಯ ಮನದೊಳಗಿರಿಸಿ ತಾನು
ನಾರಾಯಣ ಕೃಷ್ಣಾ…
ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ
ನಿಂದಿರ್ದು ವಂದನೆಯ ಮಾಡಲಿಲ್ಲೆಂದ
ಎಂದೆನುತ ಮನದಿ ಕೋಪಿಸುತ ಶಾಪಿಸಿದ
ಕುಂಜರದ ರೂಪಾಗಿ ಜನಿಸು ಹೋಗೆಂದ
ನಾರಾಯಣ ಕೃಷ್ಣಾ…
ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ
ವಿಶ್ಯಾಪ ಎಂದಿಗಾಗುವುದೆನುತ ಪೇಳು
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ
ವಿಶ್ಯಾಪ ಅಂದಿಗಾಗುವುದೆಂದು ಪೇಳೆ
ನಾರಾಯಣ ಕೃಷ್ಣಾ…
ಜ್ಞಾನವಡಗಿದವು ಅಜ್ಞಾನ ಆವರಿಸೆ
ಸೂರ್ಯ ಮುಳುಗಿದನು ಕತ್ತಲೆ ಮುಸುಕಂತೆ
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು
ಅನೆಯಾದನು ನೃಪನು ಆ ಕ್ಷಣದಿ ತಾನು
ನಾರಾಯಣ ಕೃಷ್ಣಾ…
ಮೇರುಪರ್ವತ ಕದಲಿ ಇಳಿದು ಬರುವಂತೆ
ಮೇಲುಮದ ಕೀಳು ಮದ ಸುರಿಯೆ ಕುಂಭದಲಿ
ಕಾಡಾನೆ ಕರಿಯಾನೆ ಮರಿಯಾನೆ ಸಹಿತ
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ
ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು
ಕಾನನದೊಳಗೆ ಸಂಚರಿಸುತ್ತಿದ್ದ ತಾನು
ನಾರಾಯಣ ಕೃಷ್ಣಾ…
ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ
ದಟ್ಟಡವಿಯೊಳಗೆ ಸಂಚರವ ಮಾಡುತಲೆ
ಬತ್ತಿದವು ಕೆರೆತೊರೆಯು ಬೇಸಗೆಯು ಬರಲು
ನಾರಾಯಣ ಕೃಷ್ಣಾ…
ಕಂಡಕಂಡಲ್ಲಿ ಏರುತಲಿ ಇಳಿಯುತಲಿ
ತುಂಡುತುಂಡಾಗಿ ಗಿಡಮರವ ಮುರಿಯುತಲಿ
ತಂಡತಂಡದಲ್ಲಿದ ತನ್ನ ಸತಿ ಸುತರು
ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು
ನಾರಾಯಣ ಕೃಷ್ಣಾ…
ಬಾಳೆ ಕಿತ್ತಳೆನಿಂಬೆ ಚೂತ ಮಾದಲವು
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು
ಮೇಲಾದ ಫಲಪುಷ್ಪದಿಂದ ಶೋಭಿಸಲು
ತಾವರೆ ಕೊಳವೊಂದ ಕಂಡ ಗಜರಾಜ
ನಾರಾಯಣ ಕೃಷ್ಣಾ…
ನವರತ್ನ ಮುತ್ತು ಮಾಣಿಕ್ಯ ಸೋಪಾನ
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು
ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು
ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ
ನಾರಾಯಣ ಕೃಷ್ಣಾ…
ಹೊಡೆಯುತಲಿ ಬಡೆಯುತಲಿ
ಕುಡಿಯುತಲಿ ನೀರ
ಮಡುವಿನಲ್ಲಿ ಚೆಲ್ಲುತಲಿ ನಲಿದುವೊಂದಾಗಿ
ಕಾಡಾನೆ ಕರಿಯಾನೆ ಮರಿಯಾನೆ ಸಹಿತ
ಕೂಡಿಕೊಂಡಿರಲಿಂತು ಸಂಭ್ರಮದಿ ಜಲದಿ
ನಾರಾಯಣ ಕೃಷ್ಣಾ…
ಮುನಿಯು ಶಾಪದಲೊಂದು
ಮಕರಿ ಮಡುವಿನೊಳು
ಹಲವುಕಾಲದಿ ತಪಿಸಿ ಜೀವಿಸುತ್ತಿರಲು
ಮದಗಜವು ಪೊಕ್ಕು ಮಡುವನೆ
ಕಲುಕು ತಿರಲು
ತಡೆಯದಾ ಮಕರಿ ಹಿಡಿಯಿತು
ಕರಿಯ ಕಾಲು
ನಾರಾಯಣ ಕೃಷ್ಣಾ…
ಅತ್ತಿತ್ತ ನೋಡಿದನು ಸುತ್ತ ನೋಡಿದನು
ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು
ಎಳೆದೊಮ್ಮೆ ನೋಡಿದನು
ಸೆಳದೊಮ್ಮೆ ನೋಡಿದನು
ಹೇಗೆ ನೋಡಿದರು ಬಿಡದು ಆ ಮಕರಿ ಕಾಲು
ನಾರಾಯಣ ಕೃಷ್ಣಾ…
ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ
ತಮ್ಮ ಕೈಲಾಗದೆಂದೆನುತ ತಿರುಗಿದರು
ಎನ್ನ ಪುಣ್ಯದ ಫಲವು ಹೋಗಿ ನೀವೆಂದ
ದುಮ್ಮಾನದಿಂದ ದೊರದಲ್ಲಿದ್ದರವರು
ನಾರಾಯಣ ಕೃಷ್ಣಾ…
ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು
ರಕ್ತಮಯವಾಗಿ ತುಂಬಿತು ಕೊಳದ ನೀರು
ಅಕ್ಕಟಾ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ
ನಾರಾಯಣ ಕೃಷ್ಣಾ…
ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ
ಭಕ್ತವತ್ಸಲನೆ ಭವಭಂಜನನೆ ಕಾಯೋ
ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ
ನಾರಾಯಣ ಕೃಷ್ಣಾ…
ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ
ಇಂಬಿಟ್ಟು ಸಲಹೋ ಜಗದೀಶ್ವರನೆ ಕಾಯೋ
ಜಂಗಮ ಸ್ಥಾವರಗದೊಳಗೆ ಪರಿಪೂರ್ಣ
ಎಂಬಂಥ ನೀ ಎನ್ನ ಬಂಧನವ ಬಿಡಿಸೊ
ನಾರಾಯಣ ಕೃಷ್ಣಾ…
ಈರೇಳು ಭುವನವನು ಹೃದಯದೊಳಗಿಟ್ಟೆ
ಕಾದುಕೋ ಎಂದು ಗಜರಾಜ ಮೊರೆಯಿಟ್ಟ
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ
ಬಹಳ ನೊಂದೆನೆ ಸ್ವಾಮಿ ಕಾಯೋ ಬಾಯೆಂದ
ನಾರಾಯಣ ಕೃಷ್ಣಾ…
ವೇದಗಳ ಕದ್ದು ಕೊಂಡೊಯ್ದ ದಾನವನ
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದ
ಆದಿ ನಿಗಮವ ತಂದು ಕಮಲಜನಿಗಿತ್ತೆ
ವೇದಾಂತವೇದ್ಯ ಮತ್ಸ್ಯಾವತಾರ ಶರಣು
ನಾರಾಯಣ ಕೃಷ್ಣಾ…
ಸುರಾಸುರರು ಪಾಲ್ಗಡಲ ಮಥಿಸುತಿರಲು
ಮುರವೈರಿ ಹಾಸಿಗೆಯ ಹುರಿ ಮಾಡಿಕೊಂಡು
ಭರದಿ ಮಂದರಗಿರಿಯು ಇಳಿಯುತಿರೆ ಬಂದು
ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರನು
ನಾರಾಯಣ ಕೃಷ್ಣಾ…
ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ
ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ
ಧರಣಿದೇವಿಯನು ಸದಮಲದೊಳು ಗೆದ್ದೆ
ವರಹಾವತಾರ ಶ್ರೀಹರಿ ನಿನಗೆ ಶರಣು
ನಾರಾಯಣ ಕೃಷ್ಣಾ…
ಬಾಲಕನು ಕರೆಯಲಿಕೆ ಕಂಬದಲಿ ಬಂದೆ
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ
ಶ್ರೀಲಕ್ಷ್ಮಿಪೊಡನಿದ್ದ ನರಸಿಂಹ ಶರಣು
ನಾರಾಯಣ ಕೃಷ್ಣಾ…
ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ
ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ
ಅಲೆದ ಪಾದದಲಿ ಭಾಗಿರಥಿಯ ತಂದೆ
ಚೆಲುವ ವಾಮನಮೂರ್ತಿ ತ್ರಿವಿಕ್ರಮನೆ ಶರಣು
ನಾರಾಯಣ ಕೃಷ್ಣಾ…
ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ
ರಕ್ತದಲಿ ಸ್ನಾನತರ್ಪಣವ ನೀ ಕೊಟ್ಟೆ
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ
ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು
ನಾರಾಯಣ ಕೃಷ್ಣಾ…
ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ
ದುರುಳ ರಾವಣ ಹತ್ತು ಶಿರಗಳ ತರಿದೆ
ವರ ವಿಭೀಷಣಗವನ ರಾಜ್ಯ ಗಳನಿತ್ತೆ
ಶರಣರಕ್ಷಕ ಸೀತಾಪತಿ ರಾಮ ಶರಣು
ನಾರಾಯಣ ಕೃಷ್ಣಾ…
ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ
ತುರುವ ಕಾಯುತ ಕೊಂದೆ ಹಲವು ರಕ್ಕಸರ
ಬಲರಾಮಕೃಷ್ಣ ಗೋಪಾಲಕನೆ ಶರಣು
ನಾರಾಯಣ ಕೃಷ್ಣಾ…
ತ್ರಿಪುರಸತಿಯರ ವ್ರತ ಅಪಹರಿಸಿದವನೆ
ಪೃಥ್ವಿಯೊಳು ಅಶ್ವತ್ಥನಾಗಿ ಮೆರೆದವನೆ
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ
ಪಶುಪತಿಪ್ರೀಯ ಬೌದ್ಧ ಅವತಾರ ಶರಣು
ನಾರಾಯಣ ಕೃಷ್ಣಾ…
ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು
ಬಿನ್ನಾಣದಿಂದ ತುರಗವನೇರಿಕೊಂಡು
ಬನ್ನ ಪಡಿಸುತ ಹಲವು ಪಾತಕರ ಕೊಂದೆ
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು
ನಾರಾಯಣ ಕೃಷ್ಣಾ…
ಅರಿಯದಂತಿರದೆ ಅಚ್ಯುತ ರಕ್ಷಿಸೆನ್ನ
ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ
ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ
ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ
ನಾರಾಯಣ ಕೃಷ್ಣಾ…
ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ
ಯಾವಾಗ ಹರಿಬಂದು ಕಾಯ್ವನೋ ಎನ್ನ
ಚೀರಿದನು ಕೂಗಿ ಮೊರೆಯಿಟ್ಟ ಗಜರಾಜ
ದಾನವಾಂತಕನು ಕಿವಿಗೊಟ್ಟು ಕೇಳಿದನು
ನಾರಾಯಣ ಕೃಷ್ಣಾ…
ಕ್ಷೀರಾಬ್ಧಿಯಲಿ ವೈಕುಂಠದಿ ನೆಲೆಸಿದ್ಧ
ಶೇಷನ ಹಾಸಿಗೆಯ ಮೇಲೆ ಕುಳ್ಳಿರ್ದ
ಶ್ರೀಲಕ್ಷ್ಮೀ ಸಮ್ಮೇಳನದಿ ಒಪ್ಪಿರಲು
ಆಲಯಿಸಿ ಕೇಳಿದನು ಅಜನ ಪೆತ್ತವನು
ನಾರಾಯಣ ಕೃಷ್ಣಾ…
ಶಂಕಚಕ್ರಗಳಿಲ್ಲವೆಂದು ಶಂಕಿಸದೇ
ಬಿಂಕದಿಂ ಗರುಡನ್ನ ಪೆಗಲೇರಿಸಿಕೊಳದೆ
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ
ಪಂಕಜನಾಭ ಬಂದನು ಕೊಳದ ಕಡೆಗೆ
ನಾರಾಯಣ ಕೃಷ್ಣಾ…
ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ
ವಜ್ರಕುಂಡಲ ಕದಪು ಹಾರಗಳು ಹೊಳೆಯೆ
ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ
ಎದ್ದು ಬಂದನು ದಯಾಸಮುದ್ರ ಬಂದಂತೆ
ನಾರಾಯಣ ಕೃಷ್ಣಾ…
ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ
ಮಂದಗಮನೆಯು ಬರಲು ಪುರವೆಲ್ಲ ತೆರಳೆ
ವಂದಿಸದ ಗರುಡ ಗಂಧರ್ವರೊಗ್ಗಿನಲಿ
ಅಂದಾಗ ಶಂಖಚಕ್ರವು ಕೂಡಿ ಬರಲು
ನಾರಾಯಣ ಕೃಷ್ಣಾ…
ಹರಿಯು ಗರುಡನನೇರಿ ಕರಿಯತ್ತ ಬರಲು
ಹರ ಪಾರ್ವತಿಯರು ನಂದಿಯನೇರಿಕೊಳುತ
ಶಿರದ ಮೇಲಿನ ಗಂಗೆ ತುಳುಕಾಡುತಿರಲು
ಹರ ಬಂದ ಕೈಲಾಸಪುರದಿಂದ ಇಳಿದು
ನಾರಾಯಣ ಕೃಷ್ಣಾ…
ತೊಡೆಯ ಮೇಲಿನ ಗೌರಿದೇವಿಯಳ ಸಹಿತ
ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು
ಹರಪಾರ್ವತಿದೇವಿ ವೃಷಭವನ್ನೇರಿ
ಹರ ಬಂದ ಕೈಲಾಸಪುರದಿಂದ ಇಳಿದು
ನಾರಾಯಣ ಕೃಷ್ಣಾ…
ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ
ದೇವಪುತ್ರಾದಿ ಸನಕಾದಿಗಳು ಕೂಡಿ
ಸುಮ್ಮನೇ ನಾರದನಂದು ನಡೆತಂದ
ಧರ್ಮ ಸ್ವರೂಪರೆಲ್ಲಾ ನೆರೆದರಂದು
ನಾರಾಯಣ ಕೃಷ್ಣಾ…
ಬಂದ ಚಕ್ರವನು ಕರಕಮಲದಲಿ ತೆಗೆದು
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ
ಅಂದಾಗ ಅವನ ಶಾಪ ವಿಶ್ಯಾಪವಾಗಿ
ಗಂಧರ್ವ ರೂಪಿನಲಿ ನಿಂತಿತಾ ಮಕರಿ
ನಾರಾಯಣ ಕೃಷ್ಣಾ…
ಹರಿಯ ಸುದರ್ಶನವು ಮದಗಜಕೆ ಸೋಕುತಲೆ
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ
ಉಟ್ಟ. ಪೀತಾಂಬರವು ಕಿರೀಟ ಕುಂಡಲವು
ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು
ನಾರಾಯಣ ಕೃಷ್ಣಾ…
ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ
ಜಯ ಜಯ ಜನಾರ್ಧನ ಜಯ ವಿಶ್ವರೂಪ
ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ
ಜಯವೆಂದು ಪದಗಳಿಗೆ ಬಂದು ಎರಗಿದನು
ನಾರಾಯಣ ಕೃಷ್ಣಾ…
ಇಂದಿವನ ಭಾಗ್ಯವನು ನೋಡುವರು ಕೆಲರು
ಇಂದಿರಾ ಪತಿಯ ಕೊಂಡಾಡುವರು ಕೆಲರು
ಮಂದಾರ ಹೂಮಳೆಯ ಕರೆಯುತ್ತ ಸುರರು
ದುಂದುಭಿ ವಾದ್ಯಗಳ ವೈಭವಗಳಿರಲು
ನಾರಾಯಣ ಕೃಷ್ಣಾ…
ಸಿರಿಸಹಿತ ಹರಿಯು ಗರುಡ ನೇರಿಕೊಂಡು
ಕರಿರಾಜನೊಡನೆ ವೈಕುಂಠಕ್ಕೆ ಬರಲು
ಹರಪಾರ್ವತಿಯರು ಕೈಲಾಸಕೆ ತೆರಳೆ
ತರತರದ ವಾಹನಾದಿ ಸುರರು ತೆರಳಿದರು
ನಾರಾಯಣ ಕೃಷ್ಣಾ…
ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ
ದುಃಸ್ವಪ್ನ ದುರ್ಬುಧಿ ದುರ್ವ್ಯಸನ ಕಳೆವದು
ಸರ್ಪಾರಿ ವಾಹನನ ಧ್ಯಾನ ದೊಳಗಿರಲು
ಸತ್ಸಂಗ ಸಾಯುಜ್ಯ ಪದವಿ ದೊರಕುಪುದು
ನಾರಾಯಣ ಕೃಷ್ಣಾ…
ಹರಿಯ ನೆನೆ ಹರಿಯ ನೆನೆ
ಹರಿಯ ನೆನೆ ಮನವೆ
ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ
ಹರಿಯ ನೆನೆದವರಿಗೆ
ಪರಮ ಪದವಿಯು ಉಂಟು
ಕರಿರಾಜವರದನ್ನ ಶರಣೆಂದು ಭಜಿಸು
ನಾರಾಯಣ ಕೃಷ್ಣಾ…
ಜಯತು ದ್ರುವರಾಯನಿಗೆ ವರವಿತ್ತ ದೇವ
ಜಯತು ಪ್ರಲ್ಹಾದಗಭಯವಿತ್ತ ದೇವ
ಜಯತು ದ್ರೌಪದಿಯಭಿಮಾನ ಕಾಯ್ದು ದೇವಾ
ಜಯತು ಜಯ ಹಯವದನ ಶ್ರೀವಾಸುದೇವ
ನಾರಾಯಣ ಕೃಷ್ಣಾ…