
ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀ ತಥಾ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ ||
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ||
1. ಶ್ರೀಮಾತ ಶೈಲಪುತ್ರಿ ದೇವಿ
ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||
ಶೈಲಪುತ್ರಿ : ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.
2 ಶ್ರೀಮಾತ ಬ್ರಹ್ಮಚಾರಿಣಿ ದೇವಿ
ದಧಾನಾಂ ಕರಪದ್ಮಬ್ಯಾಂ ಅಕ್ಷಮಾಲಾ ಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಮ್ಹಚಾರಿಣ್ಯನುತ್ತಮಾ ||
ಬ್ರಹ್ಮಚಾರಿಣಿ : ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.
3. ಶ್ರೀಮಾತ ಚಂದ್ರಘಂಟಾ ದೇವಿ
ಪಿಣಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೆ ಮಹ್ಯಾಂ ಚಂದ್ರಘಂಟೆತಿ ವಿಶ್ರುತಾ ||
ಚಂದ್ರಘಂಟಾ : ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.
4. ಶ್ರೀಮಾತ ಕೂಷ್ಮಾಂಡಾ ದೇವಿ
ಸುರಾಸಂಪೂರ್ಣ ಕಲಶಂ ರುಧಿರಾಪ್ಲುತಮೇವಚ |
ದಧಾನಾ ಹಸ್ತಪದ್ಮಾಭ್ಯಾಂ ಮೂಷ್ಮಾಂಡಾ ಶುಭದಾಸ್ತುಮೆ ||
ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ – ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.
5. ಶ್ರೀಮಾತ ಸ್ಕಂದಮಾತಾ ದೇವಿ
ಸಿಂಹಾಸನಗತಾನಿತ್ಯಂ ಪದ್ಮಾಂಚಿತಕರಾದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||
ಸ್ಕಂದಮಾತಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.
6. ಶ್ರೀಮಾತ ಕಾತ್ಯಾಯನೀ ದೇವಿ
ಚಂದ್ರಹಾಸೊಜ್ವಲಕರಾ ಶಾರರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾತ್ ದೇವಿ ದಾನವಘಾತಿನೀ ||
ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
7. ಶ್ರೀಮಾತ ಕಾಲರಾತ್ರಿ ದೇವಿ
ಎಕವೇಣೀ ಜಪಾಕರ್ಣಪೂರಾ ನಗ್ನಾ ಸ್ವರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ ||
ವಾಮಪಾದೋಲ್ಲಸಲ್ಲೀಹಲತಾಕಂಟಕಭೂಷಣಾ |
ವರ್ಧನ್ಮೂರ್ಧಧ್ವಜಾ ಕೃಷ್ಣ ಕಾಲರಾತ್ರೀ ಭಯಂಕರೀ ||
ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.
8. ಶ್ರೀಮಾತ ಮಹಾಗೌರಿ ದೇವಿ
ಶ್ವೆತೆ ವೃಶೆ ಸಮಾರೂಢಾ ಶ್ವೆತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||
ಮಹಾಗೌರಿ : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.
9. ಶ್ರೀಮಾತ ಸಿದ್ಧಿದಾಯಿನೀ ದೇವಿ
ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮರೈರಪಿ |
ಸೆವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’
(ಸಂಗ್ರಹ )