
ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು
ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ |
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು
ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧||
ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ
ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ |
ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು
ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ||೨||
ಇರುತಿರಲು ಒಂದಿನ ತುರಗವನೆ ಸ್ಮರಿಸುತಲಿ
ತುರಗ ಬರಲು ಕಂಡು ಮುದದಿ ತಾನೇರಿ |
ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು
ಕರುಣಾಸಾಗರ ಒಂದು ವನವ ಕಂಡನು ||೩||
ವನದಲ್ಲಿ ವನಜಾಕ್ಷಿ ರಾಜಪುರ್ತಿಯ ಕಂಡು
ಮನಕೆ ಬಂದಂತಾಡಿ ಕಲಹ ಮಾಡಿದರು |
ಮನಸಿಜ ತಾನು ಅಶ್ವವ ಕಳಕೊಂಡು ಘನವಾದ
ಗಿರಿ ಏರಿ ಮಲಗಿದ ಹರಿಯು ||೪||
ನಗಧರ ಮಲಗಲು ಬಕುಳಾವತಿಯು ಆಗ
ಬಗೆ ಬಗೆ ಕೇಳಲು ಶೋಕದಿಂ ನುಡಿದ |
ಗಗರಾಜನ ಪುತ್ರಿ ಪದ್ಮಾವತಿಯ ಕಂಡು
ಹಗಲು ಇರಳು ಆಕೆ ಮುಖವ ಸ್ಮರಿಸುವನು ||೫||
ಅವಳಿಗೋಸುಗವಾಗಿ ಇದ್ದಲ್ಲಿಗೆ ಹೋದೆ
ಅವಳಿಂದ ಎನ್ನಶ್ವ ಹತವಾಯಿತಮ್ಮ |
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು
ಅವಳ ಘಟನೆಯ ನೀನು ಮಾಡಬೇಕಮ್ಮ ||೬||
ಅಂದ ಮಾತನು ಕೇಳಿ ಬಕುಳಾವತಿಯು ಆಗ
ಆನಂದದಿಂ ರಾಜಪುರಕೆ ತೆರಳಿದಳು |
ಸುಂದರಿಯರ ಕಾರ್ಯ ಸ್ಥಿರವಾಗದೆಂದು
ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ||೭||
ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ
ಧರಣಿದೇವಿಯ ಮುಂದೆ ಶಕುನ ಹೇಳಿದನು |
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು
ಹರಿಗೆ ನಿಶ್ಚಯಮಾಡಿ ಶಂಕರ ಕಳುಹಿಸಿದನು ||೮||
ತಾಪಸೋತ್ತಮ ಬಂದು ಪತ್ರವನೆ ಕೊಡಲು
ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ |
ಆ ಪರಮ ವಂದ್ಯ ತಾ ಸುರಸ್ತೋಮವನೆ ಕರೆಸಿ
ಈ ಪರಿ ವೈಭೋಗ ಮಾಡಿದ ಹರಿಯು ||೯||
ಆ ಕ್ಷಣದಲಿ ತಾನು ತರಣಿಯನ ಕರೆಸಿ
ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ |
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ
ಆಕ್ಷೇಮವನೆ ಕೇಳಿ ತೆರಳಿದಳು ಬೇಗ ||೧೦||
ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ
ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು |
ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು
ಇಂದಿರಾದೇವಿಯು ನುಡಿದಳು ಹರಿಗೆ ||೧೧||
ಸ್ವಸ್ತಿವಾಚನ ಮಾಡಿ ಕುಲದೇವರನಿಟ್ಟು
ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ |
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ
ಸುರಸ್ತೋಮವನೆ ಕೂಡಿ ತೆರಳಿ ಬಂದ ||೧೨ ||
ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ
ಹರಿಗೆ ಭೋಜನವನ್ನು ಮುದದಿ ಮಾಡಿಸಿದ |
ಆಕಳಂಕ ಮಹಿಮನು ಬಂದ ವಾರ್ತೆಯ ಕೇಳಿ
ಸಕಲ ಜನರ ಕೂಡಿ ಕರೆಯೆ ರಾಜ ||೧೩||
ಮುದದಿಂದ ಎದುರುಗೊಂಡು ಪರಿಮಳ ಪೂಸಿ
ಸದಮಲ ಹೃದಯನ ಕರೆತಂದರು ಮನೆಗೆ |
ಪದ್ಮನಾಭನ ಪೀಠದಲಿ ಕುಳ್ಳಿರಿಸಿ
ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ||೧೪||
ಹೇನ ಕುಂಭಗಳಿಂದ ದ್ವಿಜರ ಕೈಯೊಳು
ಸ್ವಾಮಿಪುಷ್ಕರಣಿ ತೋಯವನ್ನೇ ತರಿಸಿ |
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು
ಪ್ರೇಮದಿಂದಭಿಷೇಕ ಮಾಡಿದನು ರಾಜ ||೧೫||
ಚಿನ್ನದ ಕಿರೀಟ ಆಭರಣವನ್ನಿಟ್ಟು
ಕನ್ಯಾದಾನವ ಮಾಡಿ ಧನ್ಯನಾದ |
ತನ್ನ ಮಗಳನೆ ಶ್ರೀನಿವಸಗೆ ಒಪ್ಪಿಸಿ
ಉನ್ನತ ಪದವಿಯಂ ಚೆನ್ನಾಗಿ ಪಡೆದ ||೧೬||
ಮಾವನಪ್ಪಣೆನೊಂಡು ಮೈದಗೊಸ್ತ್ರವ ಕೊಟ್ಟು
ಭಾವಶುದ್ದದಿ ತನ್ನ ಮಾವಗೊಂದಿಸಿದ |
ಯಾವಾಗ ಕರೆದರೂ ಬರುವೆನು ನಾನೆಂದು
ಪಾವನ್ನ ಮಾಡೆಂದು ಧರಣೀಗೊಂದಿಸಿದ ||೧೭||
ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ
ಎಷ್ಟು ಹೇಳಲಿ ಈಕೆ ಸುಕೃತಫಲವೆಂತೋ |
ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ
ಸುಜನರಂದಣವೇರಿ ಪುರಕೆ ಸಾಗಿದರು ||೧೮||
ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು
ಧೀರ ತಾ ನಿಂತಾನೆ ಕುಂಭಜರಾಶ್ರಮದಿ |
ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ
ಸುಗುಣವೇಂಕಟರನ್ನ ಪುರಂದರವಿಠಲ ||೧೯||
*****