ಮೋಕ್ಷವನ್ನು ಕರುಣಿಸಿದ ಮಹಾಮುನಿ

ಮೋಕ್ಷವನ್ನು ಕರುಣಿಸಿದ ಮಹಾಮುನಿ :

ಶ್ರೀ ಗುರುರಾಯರ ಜೊತೆಯಲ್ಲಿ ವೆಂಕಣ್ಣನೆಂಬ ಸೇವಕನಿದ್ದ. ಆತನ ಕೆಲಸ ಶ್ರೀಗಳ ಮಠದಲ್ಲಿ ನೀರು ತುಂಬುವುದು. ವೆಂಕಣ್ಣನು ಯಾರ ತಂಟೆಗೂ ಹೋಗದೇ, ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡಿರುತ್ತಿದ್ದನು. ಯಾವಾಗಲಾದರೊಮ್ಮೆ ಶ್ರೀ ಗುರುರಾಯರು, ” ವೆಂಕಣ್ಣಾ, ನಿನಗೇನು ಬೇಕೋ? ” ಎಂದು ಕೇಳಿದರೆ, ” ಗುರುಗಳೇ, ಕೊಡುವದಾದರೆ ನನಗೆ ಮೋಕ್ಷ ಕೊಡಿಸಿ ಸ್ವಾಮಿ! ” ಎಂದು ಹೇಳುತ್ತಿದ್ದನು. ಶ್ರಿಮಠದ ಕೆಲವು ತುಂಟಜನರು ” ವೆಂಕಣ್ಣ, ಮೋಕ್ಷಕ್ಕೆ ಹೋಗುವದು ಯಾವಾಗಲೋ?” ಎಂದು ಪರಿಹಾಸ ಮಾಡಿದರೆ, ” ಶ್ರಿಗುರುಗಳು ಕಳಿಸಿದಾಗ! ” ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದನು.

ಶ್ರೀ ಗುರುರಾಯರು ಸಂಚಾರಕ್ರಮದಲ್ಲೊಮ್ಮೆ ಚಿತ್ರದುರ್ಗದಲ್ಲಿ ಕೋಟೆ ಬೀದಿಯಲ್ಲಿರುವ ಶ್ರೀ ಪ್ರಾಣದೇವರ ಸನ್ನಿಧಿಯಲ್ಲಿ ಬಿಡಾರ ಮಾಡುತ್ತಾರೆ. ಆ ಸಂದರ್ಭದಲ್ಲಿ, ವೆಂಕಣ್ಣನು ಮುಕ್ತಿಯೋಗ್ಯನಾಗಿರುವದನ್ನರಿತ ಶ್ರೀ ಗುರುರಾಯರು ಎಂದಿನಂತೆ ವೆಂಕಣ್ಣನನ್ನು ” ನಿನಗೇನು ಬೇಕು? ” ಎಂದು ಪ್ರಶ್ನಿಸಿದಾಗ, ವೆಂಕಣ್ಣನೂ ಎಂದಿನಂತೆ ” ಮಹಾಸ್ವಾಮಿ, ನನಗೆ ಯಾವದೇ ಐಹಿಕ ಇಚ್ಛೆ ಇಲ್ಲ, ಕೊಡುವದಾದರೆ ದಯೆಯಿಟ್ಟು ನನಗೆ ಮೋಕ್ಷ ಕೊಡಿಸಿ ಗುರುಗಳೇ! ” ಎಂದು ಪ್ರಾರ್ಥಿಸುತ್ತಾನೆ. ಶ್ರೀ ಗುರುರಾಯರು ಮುಗುಳ್ನಗುತ್ತಾ ” ವೆಂಕಣ್ಣ, ಮೋಕ್ಷವೆಂದರೆ ಸಾಮಾನ್ಯ ವಿಚಾರವಲ್ಲ, ಅದಕ್ಕೆ ಪೂರ್ವತಯಾರಿ ಮುಖ್ಯ. ಅದರಿಂದ ಪ್ರಾಣಹಾನಿ ಆದರೂ ಆಗಬಹುದು. ನಾವು ಹೇಳಿದಂತೆ ಮಾಡಲು ಸಿದ್ಧನಾಗಿರುವೆಯೋ? ” ಎಂದು ಪ್ರಶ್ನಿಸಿದಾಗ ವೆಂಕಣ್ಣನು ” ತಮ್ಮ ಆಜ್ಞೆ ನನಗೆ ಶಿರೋಧಾರ್ಯ! ” ಎಂದನು. ಆಗ ಶ್ರೀ ಗುರುರಾಯರು ” ಹಾಗಿದ್ದರೆ, ನಾಳೆ ನಿನಗೆ ಮೋಕ್ಷ ಕೊಡಿಸುತ್ತೇವೆ, ಸಿದ್ಧನಾಗಿರು.” ಎಂದರು.
ಮರುದಿನ, ವೆಂಕಣ್ಣನಿಗೆ ಮೋಕ್ಷ ಕೊಡಿಸುವ ವಿಚಾರ ಚಿತ್ರದುರ್ಗದಲ್ಲೆಲ್ಲಾ ಹರಡಿ, ಹತ್ತಾರು ಸಾವಿರ ಜನ ಶ್ರಿಮಠದ ಮುಂದೆ ಜಮಾಯಿಸಿದರು. ಎಂದಿನಂತೆ, ಶ್ರೀ ಗುರುರಾಯರು ತಮ್ಮ ಪ್ರಾತರಾಹ್ನಿಕ, ಅನುಷ್ಟಾನವನ್ನೆಲ್ಲಾ ಮುಗಿಸಿ, ವೆಂಕಣ್ಣನ ಸ್ನಾನ, ಸಂಧ್ಯಾವಂದನೆಗಳೆಲ್ಲ ಮುಗಿದ ಮೇಲೆ, ಆತನಿಂದ ಹೋಮ ಮಾಡಿಸಿ, ಆ ಹೋಮಾಗ್ನಿಯಿಂದಲೇ ಮಗದೊಂದು ಅಗ್ನಿಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಿಸಿ, ವೆಂಕಣ್ಣನಿಗೆ ತೀರ್ಥವನ್ನು ಕೊಟ್ಟು, ಕಿವಿಯಲ್ಲಿ ಬೀಜಾಕ್ಷರ ಮಂತ್ರವನ್ನು ಉಪದೇಶಿಸಿ ಉರಿಯುತ್ತಿರುವ ಅಗ್ನಿಕುಂಡದಲ್ಲಿ ಹಾರುವಂತೆ ಆಜ್ಞಾಪಿಸುತ್ತಾರೆ. ವೆಂಕಣ್ಣನು, ಭಕ್ತಿಯಿಂದ ಕೈಜೋಡಿಸಿ, ಶ್ರೀ ಗುರುರಾಯರು ಉಪದೇಶಿಸಿದ ಮಂತ್ರವನ್ನು ಜಪಿಸುತ್ತಾ, ಆನಂದಭಾಷ್ಪಸಿಕ್ತನಯನದಿಂದ ಶ್ರೀ ಗುರುರಾಯರನ್ನು ಮೂರುಸಲ ಪ್ರದಕ್ಷಿಣೆ ಬಂದು, ತದೇಕದೃಷ್ಟಿಯಿಂದ ಶ್ರೀ ಗುರುರಾಯರನ್ನೇ ವೀಕ್ಷಿಸುತ್ತಾ, ಅವರನ್ನೇ ಮೈಮನವನ್ನೆಲ್ಲ ತುಂಬಿಕೊಂಡು ” ಶ್ರೀ ರಾಘವೇಂದ್ರ ಗುರುಸಾರ್ವಭೌಮ ಗೋವಿಂದಾ…….ಗೋವಿಂದ…….” ಎನ್ನುತ್ತಾ ಅಗ್ನಿಕುಂಡಕ್ಕೆ ಹಾರಿದನು! ನೆರೆದ ಜನಸ್ತೋಮವೆಲ್ಲ ” ಅಯ್ಯೋ, ಈ ಸ್ವಾಮಿಗಳು ನಂಬಿದ ಭಕ್ತನ ಪ್ರಾಣ ತೆಗೆದುಬಿಟ್ಟರಲ್ಲಾ, ಎಂತಹ ಅನಾಹುತ! ” ಎಂದು ಕೂಗುತ್ತಿರಲು, ಶ್ರೀ ಗುರುರಾಯರು ಮುಗುಳ್ನಗುತ್ತಾ, ” ಪ್ರಾಣತೆಗೆದೆವೋ, ಮೋಕ್ಷ ಕೊಡಿಸಿದೆವೋ, ಇನ್ನು ಸ್ವಲ್ಪ ಹೊತ್ತಿನಲ್ಲೇ ತಿಳಿಯುವದು! ” ಎಂದು ಆಕಾಶದ ಕಡೆ ಮುಖಮಾಡಿದರು. ಅಂತೆಯೇ, ಎಲ್ಲರೂ ಆಕಾಶದ ಕಡೆ ಮುಖ ಮಾಡಲು, ಎಲ್ಲರೂ ಆಶ್ಚರ್ಯಪಡುತ್ತಿರಲು, ದೈವಘಂಟಾನಿನಾದವು ಕೇಳಿಸಿತು ಹಾಗೂ ದಿವ್ಯದೇಹಧಾರಿಯಾಗಿ ದೈವವಿಮಾನದಲ್ಲಿ ಶ್ರೀ ವಿಷ್ಣುದೂತರಿಂದೊಡಗೂಡಿ ಶ್ರೀ ಗುರುರಾಯರನ್ನೇ ನೋಡುತ್ತಾ ಭಕ್ತಿಯಿಂದ ಕೈಜೋಡಿಸಿಕೊಂಡಿರುವ ವೆಂಕಣ್ಣನು ಕ್ಷಣಕಾಲ ಗೋಚರಿಸಿದನು! ನೆರೆದ ಜನರೆಲ್ಲಾ ” ನಮ್ಮಿಂದ ಅಪರಾಧವಾಯಿತು, ಕೃಪೆಯಿಟ್ಟು ಕ್ಷಮಿಸಬೇಕು. ಶ್ರೀ ಗುರುರಾಘವೇಂದ್ರ ಗುರುಸಾರ್ವಭೌಮ ಜಯ! ಜಯ! ” ಎಂದು ಶ್ರೀ ಗುರುರಾಯರ ಪಾದಕ್ಕೆರಗಿದರು.
ಶ್ರೀ ಗುರುರಾಯರು ಬಿಡಾರ ಮಾಡಿದ ಶ್ರೀ ಪ್ರಾಣದೇವರ ಸನ್ನಿಧಾನದಲ್ಲಿ ಈಗ ಶ್ರೀ ಗುರುರಾಯರ ಮಠವಿದೆ ಹಾಗೂ ಅದರ ಸನಿಹದಲ್ಲೇ ವೆಂಕಣ್ಣನಿಗೆ ಮೋಕ್ಷ ಕೊಡಿಸಿದ ಜಾಗವೂ ಇದೆ.

ಒಂದು ಚಿಂತನೆ :
೧. ಸಾಮಾನ್ಯ ಮನುಷ್ಯರಿಗೆ ದೈವ ವಿಮಾನವನ್ನು ನೋಡುವ ಶಕ್ತಿಯಾಗಲೀ, ದೈವ ಘಂಟಾ ಆಲಿಸುವ ಶಕ್ತಿಯಾಗಲೀ ಇರುವದಿಲ್ಲ. ಭಗವಂತನ ಹಿರಿಮೆಯನ್ನು ಮೆರೆಯುವದಕ್ಕೋಸ್ಕರ, ಒಂದು ಕ್ಷಣ ಕಾಲ ಹತ್ತಾರು ಸಾವಿರ ಜನರಿಗೆ ಆ ಶಕ್ತಿಯನ್ನು ಕರುಣಿಸಬೇಕಾದರೆ, ಶ್ರೀ ಗುರುರಾಯರ ಮಹಿಮೆಯನ್ನು ವಾಚಕರು ಇಲ್ಲಿ ಗಮನಿಸಬೇಕು!

೨. ವೆಂಕಣ್ಣನಿಗೆ ಶ್ರೀ ಗುರುರಾಯರ ಹೊರತಾಗಿ ಇನ್ನೇನೂ ಗೊತ್ತಿರಲಿಲ್ಲ. ಶ್ರೀ ಗುರುರಾಯರ ಅನೇಕ ಪವಾಡ ಸದೃಶ ಮಹಿಮೆಗಳನ್ನು ಕಣ್ಣಾರೆ ಕಂಡಿದ್ದ ವೆಂಕಣ್ಣನಿಗೆ, ತನ್ನ ಮನದಿಚ್ಚೆಯನ್ನು ಈಡೇರಿಸುವ ಶಕ್ತಿ ಹಾಗೂ ಗುಣ ಶ್ರೀ ಗುರುರಾಯರಲ್ಲಿದೆ ಎಂದು ಅಚಲವಾದ ವಿಶ್ವಾಸ ಹಾಗೂ ನಂಬಿಕೆಯಿತ್ತು. ಇಲ್ಲಿ, ಗೆದ್ದಿದ್ದು ವೆಂಕಣ್ಣನಿಗೆ ಶ್ರೀ ಗುರುರಾಯರಲ್ಲಿರುವ ಅಚಲವಾದ ವಿಶ್ವಾಸ ಹಾಗೂ ನಂಬಿಕೆ! ಆದ್ದರಿಂದ, ಕೊಡುವ ಶಕ್ತಿ ಭಗವಂತ ಹಾಗೂ ಗುರುಗಳಲ್ಲಿ ಇದ್ದರೂ, ನಮಗೆ ಅವರಲ್ಲಿರುವ ಏಕನಿಷ್ಠೆ, ಶೃದ್ಧೆ ಹಾಗೂ ನಂಬಿಕೆಗಳು ಅತಿಮುಖ್ಯ!

__________

॥ ಓಂ ಶ್ರೀ ರಾಘವೇಂದ್ರಾಯ ನಮಃ ॥

॥ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥
॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ॥

ಸಂಗ್ರಹ

Leave a Reply